ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ) ರಾಜ್ಯಘಟಕ-ಧಾರವಾಡ ವತಿಯಿಂದ OTS ಗೆ ಬೆಂಬಲ

ಧಾರವಾಡ ಏ.20.ಸೇವಾವದಿಯಲ್ಲಿ ಒಮ್ಮೆ ಬಯಸಿದ ಜಿಲ್ಲೆಗೆ ವರ್ಗಾವಣೆ
OTS Transfer (One time settlement transfer)
ಕೋರಿ ಬೆಂಗಳೂರಲ್ಲಿ ನೂರಾರು ಶಿಕ್ಷಕ ಶಿಕ್ಷಕಿಯರು ಸೇರಿ ಹೋರಾಟ ನಡೆಸುತ್ತಿದ್ದಾರೆ.ಈ ಹೋರಾಟಕ್ಕೆ ನಮ್ಮ ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘವು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ ಎಂದು ಡಾ. ಲತಾ. ಎಸ್.ಮುಳ್ಳೂರ ಸಂಸ್ಥಾಪಕ ರಾಜ್ಯಾಧ್ಯಕ್ಷರು ತಿಳಿಸಿದ್ದಾರೆ.
ಹತ್ತು ಹದಿನೈದು ವರ್ಷಗಳ ಕಾಲ ನೂರಾರು ಕಿ.ಮೀ ದೂರದ ಜಿಲ್ಲೆಗಳಲ್ಲಿ ಸಂಸಾರ ಇದ್ದು ಇಲ್ಲದಂತೆ ಎಲ್ಲದರಿಂದ ದೂರವಾಗಿ ಒಬ್ಬಂಟಿಯಾಗಿ ಮನೆ ಮಾಡಿಕೊಂಡು ಶಿಕ್ಷಕ ವೃತ್ತಿ ಮಾಡುತ್ತಿರುವ ಸಹೋದರ ಸಹೋದರಿಯರು ಮಾನಸಿಕ ನೆಮ್ಮದಿಯಿಲ್ಲದೇ ಖಿನ್ನತೆಗೊಳಗಾಗಿದ್ದಾರೆ.
ಕುಟುಂಬಗಳ ನಡುವಿನ ಬಾಂದವ್ಯದಲ್ಲಿ ಬಿರುಕು ಉಂಟಾಗಿದೆ,ಅವರ ಸಂಸಾರದ ಜೀವನಗಳು ಅಸ್ತವ್ಯಸ್ಥವಾಗಿದೆ,ಪತಿ ಒಂದು ಕಡೆ, ಪತ್ನಿ ಒಂದು ಕಡೆ, ಮಕ್ಕಳು ಒಂದುಕಡೆ ಹೀಗೇ ಎಲ್ಲರ ನಡುವಿನ ಸಂಬಂಧಗಳೇ ಕಡಿದುಹೋಗಿದೆ,ಇದರಿಂದಾಗಿ ನೆಮ್ಮದಿಯಿಲ್ಲದೇ ಕೆಲಸ, ಮಾಡುತ್ತಿರುವ ಅನೇಕ ಶಿಕ್ಷಕ ಶಿಕ್ಷಕಿಯರಿದ್ದಾರೆ,ಇಳಿವಯಸ್ಸಿನ ತಂದೆತಾಯಿಗಳನ್ನು ಸಾಕಲು ಸಹಾ ಸಾದ್ಯವಾಗದ ಪರಿಸ್ಥಿತಿಗಳು ಸಹಾ ಶಿಕ್ಷಕರಿಗೆ ಇದೆ ಇದರಿಂದ ಪತಿಪತ್ನಿಗಳ ನಡುವೇ ವ್ಯಾಜ್ಯಗಳು, ವಿಚ್ಚೇದನ ಪ್ರಕರಣಗಳು ಹೆಚ್ಚಾಗಿದೆ, ಮಾನಸಿಕ ಖಿನ್ನತೆಗೊಳಗಾಗಿದ್ದಾರೆ.


ಮಹಿಳಾ ಶಿಕ್ಷಕಿಯರು ಒಬ್ಬಂಟಿಯಾಗಿ ಮನೆ ಮಾಡಿಕೊಂಡು ಭಯದಿಂದ ಬದುಕುವ ಸ್ಥಿತಿ ಇದೆ ,ಭಯದ ವಾತಾವರಣದಲ್ಲಿಯೇ ಶಾಲೆಗೆ ಹೋಗಿ ಕೆಲಸ ಮಾಡುತ್ತಿರುವ ಹಲವಾರು ಶಿಕ್ಷಕಿಯರಿದ್ದಾರೆ.ಇದರಿಂದ ಶಾಲೆಯಲ್ಲಿ ಶಿಕ್ಷಕ ಶಿಕ್ಷಕಿಯರು ನೆಮ್ಮದಿಯಾಗಿ ಪಾಠ ಕಲಿಸಲು ಸಾದ್ಯವಾಗುತಿಲ್ಲ, ಈಗಾಗಲೇ ಈ ಸಂಬಂಧ ಹಲವಾರು ಬಾರಿ ಮನವಿಯನ್ನು ಸಲ್ಲಿಸಿ ಸರ್ಕಾರದ ಗಮನ ಸೆಳೆಯಲಾಗಿದೆ.
ಇದನ್ನೆಲ್ಲ ಮನಗಂಡು ಘನ ಸರ್ಕಾರವು ಕೂಡಲೇ ಅಂತಹ ಶಿಕ್ಷಕ ಶಿಕ್ಷಕಿಯರನ್ನು ಸೇವೆಯಲ್ಲಿ ಒಂದುಬಾರಿ ಅವರು ಬಯಸಿದ ಜಿಲ್ಲೆಗೆ ಈ ರಜೆ ಅವಧಿಯಲ್ಲಿಯೇ ವರ್ಗಾವಣೆ ಮಾಡಿ ಬರುವ ಶೈಕ್ಷಣಿಕ ವರ್ಷದಿಂದಾದರೂ ನೆಮ್ಮದಿಯ ಜೀವನದೊಂದಿಗೆ ಶಾಲಾ ಕರ್ತವ್ಯ ನಿರ್ವಹಿಸಲು ಅನುಕೂಲ ಮಾಡಿಕೊಡಬೇಕೆಂದು ಈ ಮೂಲಕ ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘವು ಒತ್ತಾಯಿಸಿದೆ

ಪಾನಕ,ಮಜ್ಜಿಗೆ ಹಂಚಿದ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರು

ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ) ರಾಜ್ಯಘಟಕ-ಧಾರವಾಡ, ಜಿಲ್ಲಾ ಘಟಕ ರಾಮನಗರ ಹಾಗೂ ತಾಲೂಕು ಘಟಕ ರಾಮನಗರದ ಸಂಯುಕ್ತ ಆಶ್ರಯದ ವತಿಯಿಂದ ಇಂದು ರಾಮನವಮಿಯ ಪ್ರಯುಕ್ತ ಮದ್ಯಾಹ್ನ 1 ಗಂಟೆಗೆ ಕೆಂಗಲ್ ಆಂಜನೇಯ ಸ್ವಾಮಿ ದೇವಾಲಯದ ಬಳಿ ಮಜ್ಜಿಗೆ ಪಾನಕವನ್ನು ಹಂಚುವ ಕಾರ್ಯಕ್ರಮವನ್ನು ಹಮ್ಮಿಕ್ಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ರಾಮನಗರ ಜಿಲ್ಲೆಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಮತಿ ರೀಟಾ ಮನುಗೌಡ ಅವರು ಜಿಲ್ಲಾ ಉಪಾಧ್ಯಕ್ಷರಾದ ಶ್ರೀಮತಿ ಗೌರಮ್ಮ ಅವರು, ರಾಮನಗರ ತಾಲೂಕು ಅಧ್ಯಕ್ಷರಾದ ಶ್ರೀಮತಿ ಸತ್ಯಭಾಮ ಅವರು ಮತ್ತು ಪ್ರಧಾನ ಕಾರ್ಯದರ್ಶಿಗಳಾದ ಶ್ರೀಮತಿ ಸಾಕಮ್ಮ ಅವರು ಉಪಸ್ಥಿತರಿದ್ದರು.ಸ

ಸೇವೆಯನ್ನು ರಾಜ್ಯಘಟಕವು ಮೆಚ್ಚಿ ಅಭಿನಂದನೆ ಸಲ್ಲಿಸಿದೆ.

ಅನಧಿಕೃತ ಎಂದು ಅಪಪ್ರಚಾರ ಮಾಡುವವರಿಗೆ ಎಚ್ಚರಿಕೆಯ ಕಿವಿಮಾತು ಹೇಳಿದ ಡಾ.ಲತಾ.ಎಸ್.ಮುಳ್ಳೂರ

ಸಂಘಟನೆಗೆ ಸರ್ಕಾರದಿಂದ ನೊಂದಣಿ ಕಡ್ಡಾಯ ಹೊರತು ಸರ್ಕಾರದ ಮಾನ್ಯತೆ ಪ್ರಮುಖವಲ್ಲ,ಸರ್ಕಾರದ ಮಾನ್ಯತೆ ಇಲ್ಲದ ಕಾರಣಕ್ಕೆ ಸಂಘಟನೆಗಳು ಅನಧಿಕೃತ ಎಂದು ಭಾವಿಸುವುದು ತಪ್ಪು.

ಸಂಘಟನೆ ಎಂಬುದು ಯಾರೊಬ್ಬರ ಹಿಡಿತದಲ್ಲಿ ರಚಿಸಿಕೊಳ್ಳುವ ವ್ಯವಸ್ಥೆ ಅಲ್ಲ..
ಯಾರೊಬ್ಬ ವ್ಯಕ್ತಿಯ ಬೆಂಬಲದ ಅನುಮತಿಯ ಅವಶ್ಯಕತೆಯೂ ಇಲ್ಲ, ತಮ್ಮ ಒಳಿತಿಗಾಗಿ,ರಕ್ಷಣೆಗಾಗಿ ಸಮಾನರು ಎಲ್ಲರೂ ಒಗ್ಗೂಡಿ ಒಗ್ಗಟ್ಟು ಮೂಡಿಸಿಕೊಳ್ಳುವ ಒಂದು ಸ್ವಯಂನಿರ್ಧಾರಿತ ಸಮೂಹದ ವ್ಯವಸ್ಥೆಯಾಗಿದೆ.ಸಂಘ ವ್ಯವಸ್ಥೆಗೆ ಸಂವಿಧಾನ ಕಾನೂನಿನ ಅಡಿಯಲ್ಲಿಯೂ ಸಹಾ ಅವಕಾಶ ಕಲ್ಪಿಸಲಾಗಿದೆ.ಯಾವುದೇ ಸಂಘ ಸಂಸ್ಥೆಗಳು ಕರ್ನಾಟಕ ಸರ್ಕಾರ,ಸಹಕಾರ ಇಲಾಖೆಯಲ್ಲಿ ನೊಂದಣಿ ಮಾಡಿಕೊಂಡಿರುತ್ತವೆ. ಅಂತ ನೊಂದಣಿಯಾದ ಸಂಘಗಳೆಲ್ಲವೂ ಅಧಿಕೃತ ಸಂಘಗಳಾಗಿರುತ್ತವೆ.ಇಲಾಖೆಯ ನೊಂದಣಿ ಪ್ರಮಾಣ ಪತ್ರವೇ ಸಂಘದ ಅಧಿಕೃತವಾದ ದಾಖಲೆಯಾಗಿರುತ್ತದೆ.
ಸಂಘದ ಸದಸ್ಯರೆಲ್ಲರೂ ಉತ್ತಮ ನಾಯಕತ್ವದ ಅಡಿಯಲ್ಲಿ ಸಾಮೂಹಿಕ ಒಗ್ಗಟ್ಟು ಪ್ರದರ್ಶಿಸುವ ಜೊತೆಯಲ್ಲಿ ಪ್ರಾಮಾಣಿಕವಾಗಿ,ನಿಸ್ವಾರ್ಥತೆಯಿಂದ,ಸೇವಾಮನೋಭಾವದಿ ಅತ್ಯುತ್ತಮ ಸಮಾಜನುಖಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಾಗ ಅಂತಹ ಸಂಘಟನೆಗಳು ತಾನಾಗಿಯೇ ಬೆಳೆದು ನಿಲ್ಲುತ್ತವೆ. ಅಂತಹ ಸಂಘಟನೆಗಳು ಅಗತ್ಯವೆನಿಸಿದರೆ ಮುಂದಿನ ದಿನಗಳಲ್ಲಿ ಸರ್ಕಾರದಿಂದ ವಿಶೇಷ ಸ್ಥಾನಮಾನ ಪಡೆಯಲು ಅಂದರೆ ಮಾನ್ಯತೆ ಪಡೆದುಕೊಳ್ಳಲು ಮುಂದಾಗಲೂಬಹುದು.

ಸಂಘದ ಬೆಳವಣಿಗೆ ಸಹಿಸದ ಕೆಲವರು,ಅಧಿಕೃತ ಸಂಘ ರಚನೆಯ ನಿಯಮ ತಿಳಿಯದ ಅಥವಾ ಮಾನ್ಯತೆಗೂ ನೊಂದಣಿಗೂ ವ್ಯತ್ಯಾಸ ತಿಳಿಯದ ಕೆಲವರು ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ಅನಧಿಕೃತ ಸಂಘ,ಮಾನ್ಯತೆ ಇಲ್ಲ ಎಂದು ವಾಟ್ಸಪ್ ಜಾಲತಾಣದಲ್ಲಿ ಪ್ರಚಾರ ಮಾಡಿ ತಮ್ಮತನವನ್ನು,ತಮ್ಮ ಗೌರವವನ್ನು,ತಮ್ಮ ಮರ್ಯಾದೆ ಯನ್ನು ತಾವೇ ಕಳೆದುಕೊಳ್ಳುತ್ತಿರುವ ಸಂದೇಶಗಳನ್ನು ನಾವಿಂದು ನೋಡುತ್ತಿದ್ದೇವೆ.
ಇಂದು ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘವು ರಾಜ್ಯಾದ್ಯಂತ ತೀವ್ರಗತಿಯಲ್ಲಿ ಬಲಾಡ್ಯವಾಗಿ ಸಮಸ್ತ ಶಿಕ್ಷಕಿಯರು ಒಂದಾಗಿ ಒಗ್ಗಟ್ಟಾಗಿ ರುವುದು ಅಂತಹ ಕಿಡಿಗೇಡಿಗಳನ್ನು ನಿದ್ದೆಗೆಡಿಸಿರಬಹುದು.ಮಹಿಳಾ ಶಿಕ್ಷಕಿಯರು ಗುರುತರ ಹುದ್ದೆಗಳಲ್ಲಿ ಗುರ್ತಿಸಿಕೊಂಡು ಇಂದು ಸರಿಸಮಾನ ವೇದಿಕೆ ಅಲಂಕರಿಸುತ್ತಿರುವುದು ಸಹಾ ಅಂತಹ ಕಿಡಿಗೇಡಿಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿರಬಹುದು.
ಮುಂದಿನ‌ ದಿನಗಳಲ್ಲಿ ತಮ್ಮ ಸ್ಥಾನಗಳಿಗೆ ಚ್ಯುತಿ ಬರಬಹುದೆಂಬ ಭಯವೂ ಇರಬಹುದು.

ಒಂದು ಸಂಘದ ಪ್ರತಿನಿಧಿಯಾಗಲು ಆ ಸಂಘದ ಸದಸ್ಯ ಶಿಕ್ಷಕಿಯರ ಮತಗಳ ಬಿಕ್ಷೆಯೇ ಕಾರಣ ಎಂಬುದನ್ನ ಮರೆತು ಶಿಕ್ಷಕಿಯರ ಬಗ್ಗೆ ಅಗೌರವದ,ಅಹಂಕಾರದ ಮಾತುಗಳಾಡುವವರು ಮತ್ತೆ ಮತಬಿಕ್ಷೆ ಕೇಳಲು ಶಿಕ್ಷಕಿಯರ ಬಳಿ ಬರಲೇಬೇಕೆಂಬ ಕಿಂಚಿತ್ತು ಯೋಚನೆ ಮಾಡದೆ ಇಂತಹ ಹೇಳಿಕೆ ನೀಡುತ್ತಿರುವುದು ಅವರೇ ಅವರ ಅವನತಿಗೆ ಬಾವಿ ತೋಡಿಕೊಂಡಂತಿದೆ.ಅಲ್ಪಾವಧಿ ಅಧಿಕಾರದ ಬೆದರಿಕೆ ಮಾತುಗಳು ಸಂಪೂರ್ಣ ಸೇವಾವಧಿಯಲ್ಲಿ ಮತಬಿಕ್ಷೆ ಹಾಕುವ ಶಿಕ್ಷಕಿಯರಿಗೆ ಎಂದಿಗೂ ಅವಶ್ಯಕವಿಲ್ಲ. ಸದಸ್ಯರುಗಳಿಂದ ಸಂಘಟನೆ ಹೊರತು,ಸಂಘದಿಂದ ಸದಸ್ಯರುಗಳಲ್ಲ ಎಂಬುದನ್ನು ಅವರು ಮರೆತಂತಿದೆ. ಸ್ವಾಭಿಮಾನಿ ಇರುವ ಮಹಿಳಾ ಶಿಕ್ಷಕಿಯರು ನಾವು, ಹೇಳಿದೆಲ್ಲವನ್ನು ಕೇಳಲು ನಾವು ಯಾರೂ ಮೂಡಾತ್ಮರಲ್ಲ,ಯಾವ ದಬ್ಬಾಳಿಕೆಗೂ ಬಗ್ಗುವವರಲ್ಲ, ಗೊಡ್ಡು ಬೆದರಿಕೆಗಳಿಗೆ ಬೆವರುವವರಲ್ಲ. ನಮ್ಮ ಸಂಘಟನೆಯ ಪ್ರಮುಖ ಉದ್ದೇಶವೇ ನಮ್ಮ ರಕ್ಷಣೆ, ನಮ್ಮ ಜವಾಬ್ದಾರಿ,ನಮ್ಮ ಸಂಘಟನೆ ಯಾವ ಪುರುಷ ವಿರೋಧಿ ಸಂಘಟನೆ ಅಲ್ಲ,ಎಲ್ಲರ ಸಹಕಾರ ಸಹಯೋಗದಿಂದ ಬೆಳೆಯುತ್ತಿರುವ ಸಂಘಟನೆಯಾಗಿದೆ. ಸಹಕರಿಸುವ ಎಲ್ಲಾ ಸಂಘಟನೆಗಳಿಗೂ ನಮ್ಮ ಸಹಕಾರ,ನಮ್ಮ ಬೆಂಬಲವಿದೆ.ಸಹಯೋಗದಿಂದ ನಡೆಯಲು ನಾವು ಸಿದ್ದರಿದ್ದೇವೆ ಆದರೆ ಸ್ವಾಭಿಮಾನಕ್ಕೆ ದಕ್ಕೆಯಾದರೆ ಸಹಿಸುವರು ನಾವಲ್ಲ,ನಮ್ಮ ಸಂಘ,ನಮ್ಮ ಹೆಮ್ಮೆ,
ನಮ್ಮ ಸ್ವಾಭಿಮಾನ.

ಶಿಕ್ಷಕಿಯರ ಸಂಘಟನೆಗೆ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಪ್ರೋತ್ಸಾಹ

ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ) ರಾಜ್ಯಘಟಕ-ಧಾರವಾಡ
ಜಿಲ್ಲಾಘಟಕ- ವಿಜಯನಗರ,

ತಾಲ್ಲೂಕು ಘಟಕ- ಹರಪನಹಳ್ಳಿ

ಮಾ.28. ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕು ಘಟಕದ ಅಧ್ಯಕ್ಷರು.ಪ್ರಧಾನ ಕಾರ್ಯದರ್ಶಿಗಳು ಹಾಗೂ ಎಲ್ಲ ಪದಾಧಿಕಾರಿಗಳು ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಭೇಟಿಮಾಡಿ ಅಧಿಕೃತವಾಗಿ ನೂತನ ತಾಲ್ಲೂಕು ಘಟಕದ ಬಗ್ಗೆ ಮಾಹಿತಿ ನೀಡಿದರು. ರಾಜ್ಯಾದ್ಯಂತ ಹೆಮ್ಮರವಾಗಿ ಬೆಳೆದಿರುವ ಮಹಿಳಾ ಶಿಕ್ಷಕಿಯರ ಸಂಘಟನೆ ಇದಾಗಿದ್ದು ಇದರಲ್ಲಿ ರಾಜ್ಯದ ಸರ್ಕಾರಿ,ಅನುದಾನಿತ,ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕಿಯರು ಒಳಗೊಂಡಿದ್ದು,ರಾಜ್ಯ ಘಟಕದ ಅನುಮೋದನೆಯೊಂದಿಗೆ ನಾವೆಲ್ಲರೂ ತಾಲ್ಲೂಕು ಘಟಕ ರಚನೆ ಮಾಡಿಕೊಂಡಿರುತ್ತೇವೆ.ಇದರಡಿ ನಾವೆಲ್ಲರೂ ಹಲವಾರು ಶೈಕ್ಷಣಿಕ ಸೇವಾ ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲಾಗುವುದು. ತಾಲ್ಲೂಕು ಶೈಕ್ಷಣಿಕ ಕಾರ್ಯಕ್ರಮಗಳಲ್ಲಿ ನಮ್ಮ ಸಂಘದ ಸಹಕಾರ ಕೊಡಲು ನಾವು ಸದಾ ಸಿದ್ದರಿರುತ್ತೇವೆ,ಯಾವುದೇ ಕಾರ್ಯಾಗಾರ ಆಯೋಜಿಸಲು ನಮ್ಮನ್ನು ಸಹಾ ಪರಿಗಣಿಸಿ ಅವಕಾಶ ಕಲ್ಪಿಸಿಕೊಡಬೇಕೆಂದು ವಿನಂತಿಸಲಾಯಿತು. ಸಕಾರಾತ್ಮಕವಾಗಿ ಸ್ಪಂದಿಸಿರುವ ಮಾನ್ಯ ಶಿಕ್ಷಣಾಧಿಕಾರಿಗಳು ಸಂಘಟನೆ ಬಗ್ಗೆ ಉತ್ತಮ ಪ್ರತಿಕ್ರಿಯೆ ನೀಡಿ ನಮ್ಮ ಸಂಪೂರ್ಣ ಬೆಂಬಲ ಪ್ರೋತ್ಸಾಹ ನೀಡುವುದಾಗಿ ತಿಳಿಸಿದ್ದಾರೆ, ಮಾನ್ಯರಿಗೆ ಸಂಘಟನ ಪರವಾಗಿ ಅನಂತ ಧನ್ಯವಾದಗಳನ್ನು ತಿಳಿಸಿದ್ದಾರೆ. ಹಾಗೆಯೇ ಇಂದು ಭಾಗವಹಿಸಿದ್ದ ತಾಲ್ಲೂಕಿನ ಎಲ್ಲಾ ಪದಾಧಿಕಾರಿಗಳಿಗೂ ಸಹಾ ಧನ್ಯವಾದಗಳನ್ನು ಸಲ್ಲಿಸಲಾಗಿದೆ.
ನಮ್ಮ ಸಂಘ ನಮ್ಮ ಹೆಮ್ಮೆ ನಮ್ಮ‌ಸ್ವಾಭಿಮಾನ

ಶಿಕ್ಷಕಿಗೆ ಹಲ್ಲೆ,ಮಾಂಗಲ್ಯ ಸರ ಕಳವು-ಠಾಣೆಗೆ ದೂರು ಸಲ್ಲಿಸಿದ ಶಿಕ್ಷಕಿಯರ ಸಂಘ

ಸಾಗರ ಮಾ.25.ಕಳೆದ ಎರಡು ದಿನಗಳ ಹಿಂದೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕಿ ಶ್ರೀಮತಿ ಪ್ರಭಾವತಿ ಬ್ರಾಹ್ಮಣ ಮಂಚಾಲೆ ರವರು ಎಂದಿನಂತೆ ಬೆಳಿಗ್ಗೆ ಶಾಲೆಗೆ ತೆರಳುತ್ತಿರುವ ಸಂದರ್ಭದಲ್ಲಿ ಮಾರ್ಗ ಮದ್ಯದಲ್ಲಿ‌ ಅವರನ್ನು ಅಪರಿಚಿತ ವ್ಯಕ್ತಿಯೊಬ್ಬರು ಏಕಾಏಕಿ ಅಡ್ಡಗಟ್ಟಿ ಹಲ್ಲೆ ಮಾಡಿ ಕೊರಳಲ್ಲಿದ್ದ 50 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರವನ್ನು ಅಪಹರಣ ಮಾಡಿದ್ದಾರೆ.ಈ ಸುದ್ದಿ ತಿಳಿದ ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ಸಾಗರ ತಾಲೂಕು ಘಟಕದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಹಲ್ಲೆಗೊಳಗಾದ ಶಿಕ್ಷಕಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಮಹಿಳಾ ಶಿಕ್ಷಕಿಯರ ಸಮಸ್ಯೆಗಳು ಹಾಗೂ ಸುರಕ್ಷಣೆಗಾಗಿ ಹೆಚ್ಚು ಗಮನ ಹರಿಸಲು ತಾಲ್ಲೂಕಿನ
ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ ಹಾಗೂ ಇಂತಹ ಘಟನೆಗಳು ಮರುಕಳಿಸದಂತೆ ಆರಕ್ಷಕ ಠಾಣಾಧಿಕಾರಿಗಳನ್ನೂ ಸಹ ಬೇಟಿ ಮಾಡಿ ಕೂಡಲೇ ಆರೋಪಿಯನ್ನು ಪತ್ತೆಮಾಡಿ ಬಂಧಿಸಬೇಕು ಹಾಗೂ ಅವನಿಂದ ಕದ್ದ ಚಿನ್ನದ ಸರವನ್ನು ವಾಪಸ್ ಕೊಡಿಸಿಕೊಡುವಂತೆ ಮನವಿ ನೀಡಿದ್ದಾರೆ.
ಸಾಗರ ತಾಲ್ಲೂಕು ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಈ ಸೇವಾ ಕಾರ್ಯವನ್ನು ಎಲ್ಲರು ಪ್ರಶಂಸಿದ್ದಾರೆ.ಅಲ್ಲಿನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ನಡೆಯನ್ನು ಶ್ಲಾಘಿಸಿ,ಶಿವಮೊಗ್ಗ ಜಿಲ್ಲಾ ಘಟಕ ಹಾಗೂ ರಾಜ್ಯಘಟಕವು ಅಭಿನಂದನೆ ಸಲ್ಲಿಸಿದೆ.

ವಿಶ್ವ ಮಹಿಳಾ ದಿನಾಚರಣೆ-ವಿವಿಧ ಸಂಘಸಂಸ್ಥೆಗಳ ಸಹಯೋಗದಲ್ಲಿ ಯಶಸ್ವಿ.

ಗುಬ್ಬಿ: ದಿನಾಂಕ 19 ಮಾರ್ಚ್ 2022

ಕರ್ನಾಟಕ ಸಾವಿತ್ರಿಬಾಯಿಪುಲೆ ಶಿಕ್ಷಕಿಯರ ಸಂಘ (ರಿ) ತಾಲ್ಲೂಕು ಘಟಕ-ಗುಬ್ಬಿ, ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಸ್ಥಳೀಯ ಸಂಸ್ಥೆ ಗುಬ್ಬಿ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಗುಬ್ಬಿಶಾಖೆ, ಲಯನ್ಸ್ ಕ್ಲಬ್ ಗುಬ್ಬಿ, ಸುಧೆ ಸೇವಾ ಟ್ರಸ್ಟ್(ರಿ) ತುಮಕೂರು, ಶ್ರೀ ಗುರುರಾಘವೇಂದ್ರ ಚಾರಿಟಬಲ್ ಟ್ರಸ್ಟ್ (ರಿ) ಗುಬ್ಬಿ, ಈ ಎಲ್ಲಾ ಸಂಘ ಸಂಸ್ಥೆಗಳ ಸಹಯೋಗದಲ್ಲಿ ವಿಶ್ವ ಮಹಿಳಾ ದಿನಾಚರಣೆ ಮತ್ತು ಸೇವಾ ತೃಪ್ತಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ನಗರದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.

ಕರ್ನಾಟಕ ಸಾವಿತ್ರಿಬಾಯಿಪುಲೆ ಶಿಕ್ಷಕಿಯರ ಸಂಘದ ಗುಬ್ಬಿ ಘಟಕದ ಕಾರ್ಯದರ್ಶಿಗಳಾದ ಶ್ರೀಮತಿ ಅನಿತ ವಿ ಎಸ್ ಅವರು ಎಲ್ಲರನ್ನೂ ಕಾರ್ಯಕ್ರಮಕ್ಕೆ ಸ್ವಾಗತಿಸಿದರು.
ಎಲ್ಲಾ ಗಣ್ಯರು ದೀಪವನ್ನು ಬೆಳಗಿಸಿ ಸಾವಿತ್ರಿಬಾಯಿ ಪುಲೆಯವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಾರ್ಯಕ್ರಮವು ನಾಡಗೀತೆ ಮತ್ತು ರೈತ ಗೀತೆಯೊಂದಿಗೆ ಪ್ರಾರಂಭವಾಯಿತು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸೇವೆ ಸಲ್ಲಿಸಿದಂತಹ ಸಾಧಕಿಯರನ್ನು ಗುರುತಿಸಿ ಸನ್ಮಾನಿಸಲಾಯಿತು. ಸ್ಪರ್ಧೆಗಳಲ್ಲಿ ಗೆದ್ದವರಿಗೆ ಗಣ್ಯರಿಂದ ಬಹುಮಾನವನ್ನು ವಿತರಿಸಲಾಯಿತು.

ಸಮಾರಂಭದಲ್ಲಿ ಗುಬ್ಬಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಯುತ ಸೋಮಶೇಖರ್ ಸರ್ ಅವರು, ಕ್ಷೇತ್ರ ಸಮನ್ವಯಾಧಿಕಾರಿಗಳಾದ ಶ್ರೀಯುತ ಸಿದ್ದಲಿಂಗಸ್ವಾಮಿಯವರು, ಅಕ್ಷರ ದಾಸೋಹ ನಿರ್ದೇಶಕರಾದ ಶ್ರೀಯುತ ಯೋಗಾನಂದ ಸರ್ ರವರು, ಕರ್ನಾಟಕ ಸಾವಿತ್ರಿಬಾಯಿಪುಲೆ ಶಿಕ್ಷಕಿಯರ ಸಂಘ ಗುಬ್ಬಿ ಘಟಕದ ಅಧ್ಯಕ್ಷರಾದ ಶ್ರೀಮತಿ ಎಸ್ ವಿ ಲಕ್ಷ್ಮಿ ರವರು, ಚಿಕ್ಕನಾಯಕನಹಳ್ಳಿ ತಾಲ್ಲೂಕು ಘಟಕದ ಅಧ್ಯಕ್ಷರಾದ ಶ್ರೀಮತಿ ಯಶೋಧ ರವರು, ಲಯನ್ಸ್ ಕ್ಲಬ್ ಅಧ್ಯಕ್ಷರಾದ ಶ್ರೀಯುತ ಡಾಕ್ಟರ್ ಮಲ್ಲಪ್ಪ ಬಂಡಿಯವರು, ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಸ್ಥಳೀಯ ಸಂಸ್ಥೆ ಗುಬ್ಬಿ ಇದರ ಅಧ್ಯಕ್ಷರಾದ ಶ್ರೀಯುತ ಜಿ ಆರ್ ಶಿವಕುಮಾರ್ ಅವರು, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಗುಬ್ಬಿ ಶಾಖೆಯ ಕಾರ್ಯದರ್ಶಿಯವರಾದ ಶ್ರೀಯುತ ಕಮಲನಾಭ ಚಾರ್ಯರು, ಸುಧಾ ಸೇವಾ ಕಲೆ ಸಾಹಿತ್ಯ ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಟ್ರಸ್ಟ್ ತುಮಕೂರು ಇದರ ಅಧ್ಯಕ್ಷರಾದ ಸುಧಾ ರಾಜುರವರು, ಶ್ರೀ ಗುರುರಾಘವೇಂದ್ರ ಚಾರಿಟಬಲ್ ಟ್ರಸ್ಟ್ ಗುಬ್ಬಿ ಇದರ ಅಧ್ಯಕ್ಷರಾದ ಶ್ರೀಯುತ ರಂಗನಾಥ್ ರವರು, ಪುಟ್ಟಣ್ಣನವರು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾದ ಉಮೇಶ್ ರವರು, ಭಾರತ್ ಗೌಡ್ಸ್ ಅಂಡ್ ಗೈಡ್ಸ್ ಕಾರ್ಯದರ್ಶಿಯವರಾದ ರಂಗಪ್ಪನವರು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕರಾದ ಶ್ರೀಯುತ ಅರುಣ್ ಕುಮಾರ್ ರವರು, ನಿರ್ದೇಶಕಿಯಾದ ಶ್ರೀಮತಿ ಯಶೋದಮ್ಮನವರು, ಕರ್ನಾಟಕ ಸಾವಿತ್ರಿಬಾಯಿಪುಲೆ ಶಿಕ್ಷಕಿಯರ ಸಂಘ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿಯಾದ ಪ್ರವೀಣ ಕುಮಾರಿಯವರು, BRP ಗಳಾದ ಈಶ್ವರಪ್ಪನವರು, ಗಿರೀಶ ರವರು, ವಕೀಲರಾದ ಸದಾಶಿವಯ್ಯನವರು, ಶ್ರೀಯುತ ಅಣ್ಣಪ್ಪ ಸ್ವಾಮಿಯವರು ಪಟ್ಟಣ ಪಂಚಾಯತಿ ಅಧ್ಯಕ್ಷರು ಭಾಗವಹಿಸಿದ್ದರು, ಸಂಘದ ಕಾರ್ಯಕ್ರಮಗಳಿಗೆ ಸಹಕಾರ ನೀಡುತ್ತಿರುವ ನೆಚ್ಚಿನ ರಂಗಸ್ವಾಮಿ, ಸುರೇಶಯ್ಯ ಎಂ ಜಿ, ಹಾಗೂ ರವೀಶ್ ರವರು ಸಹಾ ಹಾಜರಿದ್ದರು, ಸಿಆರ್ಪಿ ಗಳಾದ ಚಿಕ್ಕವೀರಯ್ಯ ರವರು, ಶಿಕ್ಷಕರಾದ ಡಿಎಸ್ ಗಂಗಾಧರಯ್ಯ, ರೇಣುಕಾಪ್ರಸಾದ್ ರವರು, ಕರ್ನಾಟಕ ಸಾವಿತ್ರಿಬಾಯಿಪುಲೆ ಶಿಕ್ಷಕಿಯರ ಸಂಘದ ಗುಬ್ಬಿ ತಾಲೂಕಿನ ಎಲ್ಲಾ ಪದಾಧಿಕಾರಿಗಳು,
ಸದಸ್ಯರು ಹಾಗೂ ಜಿಲ್ಲಾ ಪ್ರತಿನಿಧಿಗಳು ಹಾಜರಿದ್ದರು.ಶ್ರೀಮತಿ ನಾಗರತ್ನಮ್ಮ ಮೇಡಂ ರವರು ಕಾರ್ಯಕ್ರಮಕ್ಕೆ ಹಾಜರಿದ್ದ ಎಲ್ಲರಿಗೂ ವಂದಿಸಿದರು. ಶ್ರೀಮತಿ ಲತಾಮಣಿ ಕೆ ಎಸ್ ರವರು ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು.

ಇಡೀ ರಾಜ್ಯಕ್ಕೆ ಮಾದರಿ ಸಂಘವಾಗಿದೆ-ಜಿಲ್ಲಾ ಶಿಕ್ಷಣಾಧಿಕಾರಿ ಹೆಚ್.ಸುಖದೇವ್ ಅಭಿಪ್ರಾಯ.

ರಾಯಚೂರು-ದಿನಾಂಕ 29 /01/ 2022 ರಂದು ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ತಾಲೂಕು ಘಟಕ ರಾಯಚೂರು ವತಿಯಿಂದ ಸಾವಿತ್ರಿಬಾಯಿ ಪುಲೆಯವರ ಜನ್ಮ ದಿನಾಚರಣೆಯನ್ನು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಷ್ಮಿಯಾದಲ್ಲಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಆಗಮಿಸಿದ ಜಿಲ್ಲಾ ಶಿಕ್ಷಣ ಅಧಿಕಾರಿಗಳಾದ H ಸುಖದೇವ ಸರ್ ರವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಶಿಕ್ಷಣ ಇಲಾಖೆಯಲ್ಲಿ ಏನಾದರೂ ಉತ್ತಮ ಕೆಲಸಗಳು ಆಗಿದ್ದರೆ ಅದಕ್ಕೆ ಕಾರಣ ಶಿಕ್ಷಕಿಯರು. ಉದಾಹರಣೆಗೆ ಎಸ್ಎಸ್ಎಲ್ ಸಿ ಫಲಿತಾಂಶ ಮತ್ತೆ ಬೇರೆ ಬೇರೆ ಕಾರ್ಯಕ್ರಮಗಳ ನಿರ್ವಹಣೆಗೆ ಮುಖ್ಯ ಕಾರಣಿಕರ್ತರು ಶಿಕ್ಷಕಿಯರಾಗಿದ್ದಾರೆ. ಶಿಕ್ಷಕಿಯರು ಶಿಕ್ಷಣ ಇಲಾಖೆಯ ಬಹುದೊಡ್ಡ ಶಕ್ತಿಯಾಗಿದ್ದಾರೆ ರಾಜ್ಯ ಮಟ್ಟದಲ್ಲಿ ಉತ್ತಮ ಕೆಲಸಗಳು ನಮ್ಮ ಜಿಲ್ಲಾ ಸಂಘದ ವತಿಯಿಂದ ನಡೆಯಬೇಕು ಎಂದು ಅವರು ಹೇಳಿದರು.

ಶಿಕ್ಷಕಿಯರು ಅಕ್ಷರದವ್ವನ ಕನಸುಗಳನ್ನು ಕಾಣಬೇಕು. ಸಾವಿತ್ರಿಬಾಯಿ ಪುಲೆಯವರ ಕನಸುಗಳನ್ನು ನನಸು ಮಾಡುವ ಸಂಘ ಇದಾಗಬೇಕು ಅಕ್ಷರದವರ ಆಶಯಗಳನ್ನು ಪ್ರತಿಯೊಂದು ಹೆಣ್ಣು ಮಗುವಿನಲ್ಲಿ ತುಂಬುವಂತಹ ಕೆಲಸವನ್ನು ನಮ್ಮ ಶಿಕ್ಷಕಿಯರು ಮಾಡಬೇಕು ಎಂದು ಹೇಳಿದರು. ಸಂಘವು ಶಿಕ್ಷಕರು ಮಾಡುವ ಉತ್ತಮ ಕೆಲಸಗಳನ್ನು ಗುರುತಿಸಿ ಎಲೆಮರೆ ಕಾಯಿಯಂತೆ ಕಾರ್ಯನಿರ್ವಹಿಸುವ ಶಿಕ್ಷಕರುಗಳನ್ನು ಸನ್ಮಾನಿಸಬೇಕು. ರಾಜ್ಯಕ್ಕೆ ಈ ಸಂಘವು ಮಾದರಿ ಸಂಘವಾಗಿದೆ ಎಂದು ಆಶಯ ವ್ಯಕ್ತಪಡಿಸಿದರು. ಬೇರೆ ಜಿಲ್ಲೆಯಿಂದ ಬಂದ ಶಿಕ್ಷಕಿಯರಿಗೆ ಧೈರ್ಯ ತುಂಬುವ, ಮಾನಸಿಕ ನೆಮ್ಮದಿ ನೀಡುವ, ಅವರ ಸಮಸ್ಯೆಗಳನ್ನು ಬಗೆಹರಿಸುವ ಕೆಲಸಗಳನ್ನು ಸಂಘವು ಮಾಡಬೇಕು ಅವರಿಗೆ ಭರವಸೆಯ ಸಂಘ ವಾಗಬೇಕು ಎಂದು ಹೇಳಿದರು. ಜಿಲ್ಲೆಯಲ್ಲಿ ಬಾಲಕಿಯರಿಗೆ ಬಹಳಷ್ಟು ಸಮಸ್ಯೆಗಳಿಗೆ ಅತಿ ಕನಿಷ್ಠವಾದ ಸಮಸ್ಯೆಗಳನ್ನು ಗುರುತಿಸಿ ನಿಮ್ಮ ಹಂತದಲ್ಲಿ ಸಾಧ್ಯವಾದರೆ ಬಗೆಹರಿಸಿ ಇಲ್ಲವಾದಲ್ಲಿ ಜಿಲ್ಲಾ ಹಂತದ ಗಮನಕ್ಕೆ ತೆಗೆದುಕೊಂಡು ಬನ್ನಿ. ಶಿಕ್ಷಕರ ಸಮಸ್ಯೆ ಇರಲಿ ಅಥವಾ ಬಾಲಕಿಯರ ಶಿಕ್ಷಣಕ್ಕೆ ಸಂಬಂಧಿಸಿದ ಸಮಸ್ಯೆಗಳು ಇರಲಿ ನನ್ನ ಗಮನಕ್ಕೆ ತನ್ನಿ ಯಾವತ್ತೂ ನಿಮ್ಮ ಜೊತೆಗೆ ಸುಖದೇವ್ ಇರುತ್ತಾರೆ ಎಂಬ ಆಶ್ವಾಸನೆಯನ್ನು ನೀಡಿದರು. ಪ್ರತಿಯೊಂದು ಕೆಲಸ ಕಾರ್ಯದಲ್ಲಿ ಶಿಕ್ಷಣ ಇಲಾಖೆ ನಿಮ್ಮ ಜೊತೆಗೆ ಇರುತ್ತದೆ. ಸಾಧ್ಯವಾದಷ್ಟು ಉತ್ತಮ ಕೆಲಸಗಳನ್ನು ಮಾಡಿ ಒಳ್ಳೆಯ ಹೆಸರನ್ನು ತೆಗೆದುಕೊಂಡು ಬನ್ನಿ ರಾಜ್ಯಕ್ಕೆ ಇಂದು ಇದು ಒಂದು ಮಾದರಿ ಸಂಘವಾಗಿದೆ ಎಂದು ತಮ್ಮ ಮಾತುಗಳ ಮೂಲಕ ಹೇಳಿದರು.ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು ತಾಲ್ಲೂಕಿನ ಪದಾಧಿಕಾರಿಗಳು ಬಾಗವಹಿಸಿದ್ದರು.ಎಲ್ಲರಿಗೂ ಅನಂತ ಧನ್ಯವಾದಗಳನ್ನು ರಾಯಚೂರು ಜಿಲ್ಲಾಧ್ಯಕ್ಷೆ ಶ್ರೀಮತಿ ಛಾಯಾ ಕೋಳೂರು ತಿಳಿಸಿದ್ದಾರೆ.