ಧಾರವಾಡ ಜೂ.22

2020-21 ಸಾಲಿನ ರಾಜ್ಯದ ಬಜೆಟ್ ನಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ರಾಜ್ಯದ ಎಲ್ಲಾ ಮಹಿಳಾ ನೌಕರರಿಗೆ ಮಕ್ಕಳ ಆರೈಕೆ ಮಾಡುವ ಸಲುವಾಗಿ ಶಿಶುಪಾಲನಾ ರಜೆ ಘೋಷಣೆ ಮಾಡಿದ್ದರು. ಅಂದಿನಿಂದ
ಶಿಶುಪಾಲನಾ ರಜೆ ಸಂಬಂಧ ಸರ್ಕಾರದ ಆದೇಶಕ್ಕಾಗಿ ಎದುರು ನೋಡುತ್ತಾ ಇದ್ದ ರಾಜ್ಯದ ಸಮಸ್ತ ಮಹಿಳಾ ನೌಕರರು,ಶಿಕ್ಷಕಿಯರುಗಳಿಗೆ ಘನ ಸರ್ಕಾರ ಇಂದು ಆದೇಶ ಜಾರಿ ಮಾಡಿದೆ.
ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘವು ಇದರ ಸಂಬಂಧ ಸರ್ಕಾರಕ್ಕೆ ಒತ್ತಾಯಿಸಿ ಹಲವಾರು ಬಾರಿ ಮನವಿ ಸಲ್ಲಿಸಿ ಗಮನ ಸೆಳೆದಿತ್ತು.ಸರ್ಕಾರ ಸ್ಪಂದಿಸಿ ಅಧೀಕೃತ ಆದೇಶವನ್ನು ಇಂದು ಪ್ರಕಟಿಸಿದೆ .ಇದರಿಂದ ರಾಜ್ಯದ ಎಲ್ಲಾ ಮಹಿಳಾ ನೌಕರರು ಒಮ್ಮೆಗೆ 15 ದಿನಗಳಿಗೂ ಕಡಿಮೆ ಇಲ್ಲದಂತೆ ಅನುಕೂಲಕ್ಕೆ ಅನುಗುಣವಾಗಿ ತಮ್ಮ ಸಂಪೂರ್ಣ ಸೇವಾವಧಿಯಲ್ಲಿ ಒಟ್ಟು 180 ದಿನಗಳ ಶಿಶುಪಾಲನೆ ರಜೆಯನ್ನು ಪಡೆಯಬಹುದಾಗಿದೆ.ಯಾವುದೇ ದಾಖಲೆ ಪ್ರಮಾಣ ಪತ್ರಗಳ ಅಗತ್ಯವಿಲ್ಲದೆ ಸೇವಾವಹಿಯಲ್ಲಿನ ಮಾಹಿತಿ ಆಧರಿಸಿ ಮಕ್ಕಳ ಸಂಖ್ಯೆಗೆ ಮಿತಿಯಿಲ್ಲದೆ ಕಿರಿಯ ಮಗುವಿಗೆ 18 ವರ್ಷ ತುಂಬುವವರೆಗೆ ಶಿಶುಪಾಲನೆ ರಜೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ.ಇದರಿಂದ ರಾಜ್ಯದ 75% ಗೂ ಹೆಚ್ಚಿರುವ ಮಹಿಳಾ ನೌಕರರುಗಳಿಗೆ ಅನುಕೂಲವಾಗಿದೆ,ಇದರಿಂದ ಎಲ್ಲಾ ಮಹಿಳಾ ಶಿಕ್ಷಕಿಯರು ಸಂತಸ ವ್ಯಕ್ತಪಡಿಸಿದ್ದಾರೆ,

ಇಂದಿನ ಈ ಶುಭ ದಿನದಂದು
ಘನ ಸರ್ಕಾರದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಬಿ.ಎಸ್.ಯಡಿಯೂರಪ್ಪ ನವರಿಗೆ ಹಾಗೂ ಮಹಿಳಾ ನೌಕರರ ಪರ ಶಿಶುಪಾಲನೆ ರಜೆ ಕೋರಿ ಪ್ರಸ್ತಾವನೆ ಸಲ್ಲಿಸಿ ಸರ್ಕಾರದ ಗಮನ ಸೆಳೆದಿದ್ದ ಕಲ್ಬುರ್ಗಿ ವಲಯದ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತರಾದ ಮಾನ್ಯ ನಲಿನ್ ಅತುಲ್ ರವರಿಗೂ ಹಾಗೂ ಆದೇಶ ಹೊರಬೀಳಲು ಸಹಕರಿಸಿದ ಘನ ಸರ್ಕಾರದ ಎಲ್ಲಾ ಮಾನ್ಯ ಕಾರ್ಯದರ್ಶಿಗಳಿಗೆ,ಅಧಿಕಾರಿಗಳಿಗೆ, ರಾಜ್ಯದ ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕಿಯರ ಪರವಾಗಿ ಕರ್ನಾಟಕ ರಾಜ್ಯ ಸಾವಿತ್ರಿಬಾಯಿಫುಲೆ ಶಿಕ್ಷಕಿಯರ ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ.ಲತಾ.ಎಸ್.ಮುಳ್ಳೂರ ರವರು ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಮತಿ ಜ್ಯೋತಿ. ಹೆಚ್.ರವರಗಳು ಅನಂತ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.




